ಕುಂದಾಪುರ: ಆಸ್ತಿಯ ವಿಚಾರಕ್ಕಾಗಿ ಮಗನಿಂದ ತಂದೆಗೆ ಹಲ್ಲೆ, ತಾಯಿ ಹಾಗೂ ಸಹೋದರಿಗೂ ಬೆದರಿಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮನೆ ಮಾರಿ ಹಣ ಕೊಡುವಂತೆ ಒತ್ತಾಯಿಸಿ ತಂದೆಯ ಮೇಲೆ ಮಗ ಹಲ್ಲೆ ನಡೆಸಿ, ಅವಾಚ್ಯವಾಗಿ ಬೈದಿರುವ ಘಟನೆ ಬಳ್ಕೂರಿನಲ್ಲಿ ಸಂಭವಿಸಿದೆ.

ಬಳ್ಕೂರಿನ ರಘು ಪೂಜಾರಿ (68) ಹಲ್ಲೆಗೊಳಗಾದವರು. ಅವರ ಪುತ್ರ ನವೀನ್ ಆರೋಪಿ.

ರಘು ಬಳ್ಳೂರಿನ 5 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದು, ಪುತ್ರ ಹಾಗೂ ಪುತ್ರಿಯ ಮದುವೆಗೆ ಸೊಸೈಟಿಯಲ್ಲಿ ಸಾಲ ಮಾಡಿದ್ದರು. ಸಾಲ ತೀರಿಸಲಾಗದೆ ಹರಾಜಿಗೆ ಬಂದಿದ್ದು, ಆಗ ಪುತ್ರಿ ಪ್ರಮೀಳಾ ಅವರು ತಮ್ಮ ಸ್ವಂತ ಹಣದಿಂದ ಸಾಲ ತೀರಿಸಿದ್ದರು. ಅನಂತರ ರಘು ಅವರು ಆ ಮನೆಯನ್ನು ಪುತ್ರಿಯ ಹೆಸರಿಗೆ ಮಾಡಿಕೊಟ್ಟಿದ್ದರು.

ಇದೇ ವಿಚಾರವಾಗಿ ಪುತ್ರ ನವೀನ್ ಮನೆ ಮಾರಿ ಹಣ ಕೊಡುವಂತೆ ತಂದೆಯನ್ನು ಪೀಡಿಸುತ್ತಿದ್ದ. ಅನೇಕ ಬಾರಿ ಹಲ್ಲೆಗೈದಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಅವರು ಎಚ್ಚರಿಕೆಯನ್ನು ಸಹ ನೀಡಿದ್ದರು.

ಮೇ.9 ರಂದು ಮನೆಗೆ ಅಕ್ರಮವಾಗಿ ನುಗ್ಗಿದ ನವೀನ್ ತನಗೆ ಬೈದು, ಹಲ್ಲೆ ಮಾಡಿ, ತಾಯಿ ಹಾಗೂ ಸಹೋದರಿಗೂ ಬೆದರಿಕೆ ಹಾಕಿರುವುದಾಗಿ ರಘು ದೂರಿನಲ್ಲಿ ತಿಳಿಸಿದ್ದಾರೆ.

ಹಲ್ಲೆಯಿಂದ ಗಾಯಗೊಂಡ ರಫ ಅವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.