ಶಿಸ್ತು ಮತ್ತು ಯಕ್ಷ ಶಿಕ್ಷಣ ಮಕ್ಕಳ ಭವಿಷ್ಯಕ್ಕೆ ಪೂರಕ: ಪ್ರಕಾಶ ಕಾರಂತ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಮಕ್ಕಳಿಗೆ ನೀಡುವ ಯಕ್ಷಗಾನ ಮತ್ತು ಶಿಸ್ತಿನ ತರಬೇತಿ ಅವರ ಭವಿಷ್ಯದ ಬೆಳವಣಿಗೆಗೆ ಪೂರಕವಾಗಿರುತ್ತದೆ. ಯಕ್ಷಗಾನ ಕ್ಷೇತ್ರದ ಹೆಸರಾಂತ ಕಲಾಕೇಂದ್ರವಾದ ಯಕ್ಷಗಾನ ಕಲಾಕೇಂದ್ರ ಮತ್ತು ಪಾಚಾರ್ಯ ಸದಾನಂದ ಐತಾಳರಂತ ಗುರುಗಳಿಂದ ತರಬೇತಿ ಪಡೆದಿರುವ ಈ ಶಿಬಿರದ ಮಕ್ಕಳು ಖಂಡಿತಾ ಬದಲಾವಣೆಯನ್ನು ಕಂಡಿರುತ್ತಾರೆ. ಶಿಬಿರದಲ್ಲಿ ಮಕ್ಕಳಲ್ಲಿ ಅಡಗಿರುವ ಕೌಶಲ್ಯವನ್ನು ರೂಪಿಸಿ ಹೊರತಂದಿದ್ದೀರಿ. ಅವರಿಗೆ ಜೀವನದ ಪಾಠವೂ ನೀಡಲಾಗಿದೆ ಎಂದು ತಿಳಿಯಬಹುದು ಎಂದು ಶ್ರೀ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷ  ಪ್ರಕಾಶ ಕಾರಂತರು ಅಭಿಪ್ರಾಯಪಟ್ಟರು.

ಅವರು ಗುಂಡ್ಮಿ ಹಂಗಾರಕಟ್ಟೆ ಐರೋಡಿ ಯಕ್ಷಗಾನ ಕಲಾಕೇಂದ್ರ ಇಲ್ಲಿ ಯಕ್ಷಗಾನ ಅಭಿನಯ ಮತ್ತು ಹೆಜ್ಜೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕಲಾ ಕೇಂದ್ರದ ಅಧ್ಯಕ್ಷ ಆನಂದ.ಸಿ.ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅವರು ಕಲಾಕೇಂದ್ರದ ಶಿಕ್ಷಣ ಸೇವೆಯನ್ನು ಶ್ಲಾಘಿಸಿದರು. 

ಕಾರ್ಯಕ್ರಮದಲ್ಲಿ ಸಾಲಿಗ್ರಾಮದ ಉದ್ಯಮಿಗಳೂ ಕಲಾಪೋಷಕ ಚಂದ್ರಶೇಖರ ಕಾರಂತ, ಕಲಾಕೇಂದ್ರದ ಆರ್ಥಿಕ ಸಮಿತಿಯ ಅಧ್ಯಕ್ಷ ಅನಂತಪದ್ಮನಾಭ ಐತಾಳ, ಪ್ರಾಚಾರ್ಯ ಸದಾನಂದ ಐತಾಳ ಉಪಸ್ಥಿತರಿದ್ದರು.

ಶ್ರೀ ಗುರುನರಸಿಂಹ ದೇವಸ್ಥಾನದ ನೂತನ ಅಧ್ಯಕ್ಷ ಪ್ರಕಾಶ ಕಾರಂತ ಮತ್ತು ಟ್ರಸ್ಟಿಗಳಾದ ಕಾರ್ಕಡ ತಾರನಾಥ ಹೊಳ್ಳರನ್ನು ಅಭಿನಂದಿಸಲಾಯಿತು. ಅಲ್ಲದೇ ಶಿಬಿರದ ಪ್ರಾಚಾರ್ಯರನ್ನು ಮತ್ತು ಸಹ ಗುರುಗಳನ್ನು ಸಮ್ಮಾನಿಸಲಾಯಿತು. ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿದ್ಯಾರ್ಥಿಗಳಿಗೆ ಕಲಿಕಾ ದೃಢಪತ್ರವನ್ನು ನೀಡಲಾಯಿತು. ನರಸಿಂಹ ತುಂಗ ಕಾರ್ಯಕ್ರಮ ಸಂಯೋಜಿಸಿದರು. ಸೀತಾರಾಮ ಸೋಮಯಾಜಿಯವರು ಕೃತಜ್ಞತೆ ಸಲ್ಲಿಸಿದರು. ಸಭಾಕಾರ್ಯಕ್ರಮದ ಪೂರ್ವದಲ್ಲಿ ಮತ್ತು ನಂತರ ಮಕ್ಕಳ ಕಲಿಕಾ ಪ್ರದರ್ಶನ ಏರ್ಪಡಿಸಲಾಗಿತ್ತು.