ಆದರ್ಶಪ್ರಾಯರಾದ ಶರಣರ ತತ್ವಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ನಮ್ಮದು: ಎಂ.ಎ. ಗಫೂರ್

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ: ಸಮಾಜದ ಅಭಿವೃದ್ಧಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡ ಪ್ರತಿಯೊಬ್ಬ ಸಂತರು, ಶರಣರು ಹಾಗೂ ಮಹಾನ್ ವ್ಯಕ್ತಿಗಳು ಸಮಾಜದ ಆಸ್ತಿ ಅವರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಪಸರಿಸುವ ಕೆಲಸವಾಗಬೇಕು ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಹೇಳಿದರು.

ಅವರು ಸೋಮವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್ ನಲ್ಲಿ ಜಿಲ್ಲಾಡಳಿತ ಜಿಲ್ಲಾಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ  ನಡೆದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರವನ್ನು ಉದ್ಘಾಟಿಸಿ,  ಶಿವಶರಣೆ ಹೇಮರೆಡ್ಡಿ ಮಲ್ಲಮ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಶಿವಶರಣೆ ಹೇಮರೆಡ್ಡಿ ಮಲ್ಲಮ್ಮರವರ ವಚನಗಳ ಸಾರ, ಭಕ್ತಿ, ನಿಷ್ಠೆ ಮತ್ತು ಧಾರ್ಮಿಕ ಭಾವನೆಯನ್ನು ಪ್ರತಿಯೊಬ್ಬರು ಅರಿತುಕೊಳ್ಳುವುದು ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಡಾ| ನಿರಂಜನ ಯು.ಸಿ ಅವರು ಶ್ರೀಶೈಲಾ ಮಲ್ಲಿಕಾರ್ಜುನರ ಭಕ್ತೆಯಾದ ಹೇಮರೆಡ್ಡಿ ಮಲ್ಲಮ್ಮ ಮಾನಸಿಕ ಶಿವಲಿಂಗ ದೀಕ್ಷೆಯನ್ನು ತೊಟ್ಟು ಸಮಾಜ, ನಾಡು, ನುಡಿ ಹಾಗೂ ಮನುಕುಲದ ಉದ್ಧಾರಕ್ಕೆ ಅಪಾರ ಕೊಡಿಗೆಯನ್ನು ನೀಡಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ದೇವರು ಮತ್ತು ಭಕ್ತನ ಸಂಬಂಧ ತಿಳಿಯಬೇಕಾದರೆ ಶರಣ ಸಾಹಿತ್ಯವನ್ನು ಓದಬೇಕು. ಶರಣ ಸಾಹಿತ್ಯ ಸಂಸ್ಕೃತಿ ಕನ್ನಡದ ಶ್ರೀಮಂತ ಭಾಗ. ತ್ರಿಪದಿ ಕವಿ ಸರ್ವಜ್ಞನಂತೆ ತೆಲುಗಿನ ಮೇರು ಕವಿ ವೇಮನನ್ನು ಸರಿ ದಾರಿಗೆ ತಂದು ತೆಲುಗು ಸಾಹಿತ್ಯ ರಚನೆಯ ಯೋಗಿಯಾಗಿ ಮಾಡಿದ ಕೀರ್ತಿ ಹೇಮರೆಡ್ಡಿ ಮಲ್ಲಮ್ಮರದ್ದು. ಹೇಮರೆಡ್ಡಿ ಮಲ್ಲಮ್ಮ ಒಬ್ಬ ಆದರ್ಶ ಸ್ತ್ರೀ ಶಕ್ತಿ ಇವರ ವಿಚಾರ ದಾರೆಗಳು ಮನೆಮಾತಾಗಬೇಕು ಎಂದರು.

ಈ ಸಂದರ್ಭದಲ್ಲಿ, ಇತೀಚಿಗೆ ನಿಧನರಾದ ಕರ್ನಾಟಕ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಿ ಸುಧಾಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು

ಕಾರ್ಯಕ್ರಮದಲ್ಲಿ   ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಡಾ| ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ|ಗಣನಾಥ ಎಕ್ಕಾರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿ, ನಿರೂಪಿಸಿ, ಶಾಂತನ ಗೌಡ ವಂದಿಸಿದರು.