ಬೈಂದೂರು ಪಡುವರಿಯಲ್ಲಿ ಮನೆಕಳವುಗೈದ ಅಂತರಾಜ್ಯ ಚೋರನ ಬಂಧನ

 


ಕುಂದಾಪ್ರ ಡಾಟ್ ಕಾಂ ಸುದ್ದಿ.

ಬೈಂದೂರು: ತಾಲೂಕಿನ ಪಡುವರಿ ಗ್ರಾಮದ ಮನೆಯೊಂದರಲ್ಲಿ ಚಿನ್ನಾಭರಣ ಕಳವುಗೈದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬೈಂದೂರು ಪೊಲೀಸರ ತಂಡ ಯಶಸ್ವಿಯಾಗಿದೆ. ಅಂತರಾಜ್ಯ ಕಳ್ಳ ಉಮೇಶ್‌ ಎಂಬಾತನನ್ನು ಬಂಧಿಸಿ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾರ್ಚ್ 03ರಂದು ಬೈಂದೂರು ಸೋಮೇಶ್ವರ  ರಸ್ತೆಯಲ್ಲಿರುವ ಪಡುವರಿ ಗ್ರಾಮದ ಗುರುಕಿರಣ್‌ ಅವರ ಮನೆಯಲ್ಲಿ ಯಾರು ಇಲ್ಲದ ಸಮಯ ಹಗಲಿನಲ್ಲಿ ಮನೆಯ ಬಾಗಿಲನ್ನು ಮುರಿದು ಮನೆಯೊಳಗಿನ ಕೋಣೆಯ  ಗೋಡ್ರೇಜ್‌ನಲ್ಲಿ  ಇರಿಸಿದ್ದ ಚಿನ್ನಾಭರಣಗಳು ಮತ್ತು ನಗದು ಕಳವು ಮಾಡಿದ್ದು  ಈ ಬಗ್ಗೆ  ಬೈಂದೂರು  ಪೊಲೀಸ್‌  ಠಾಣೆಯಲ್ಲಿ  ಪ್ರಖರಣ  ದಾಖಲಾಗಿತ್ತು.

ಈ ಪ್ರಕರಣದ ತನಿಖೆಯನ್ನು ಬೈಂದೂರು ವೃತ್ತನಿರೀಕ್ಷಕರಾದ ಶಿವಕುಮಾರ್‌ ಬಿ. ನಡೆಸುತ್ತಿದ್ದು , ಆರೋಪಿ ಪತ್ತೆಗಾಗಿ ಬೈಂದೂರು  ವೃತ್ತದ ಪಿ.ಎಸ್ಐ ಮತ್ತು ಸಿಬ್ಬಂದಿಯವರನ್ನೊಳಗೊಂಡ  ವಿಶೇಷ  ತಂಡವನ್ನು ರಚಿಸಲಾಗಿತ್ತು. ಈ  ವಿಶೇಷ ತಂಡವು ಎ.21ರಂದು ಪ್ರಕರಣದ ಆರೋಪಿಯಾದ ಅಂತರಾಜ್ಯ ಚೋರ ಕಾಪುವಿನ ಉಮೇಶ್‌  ಬಳೆಗಾರ  @  ಉಮೇಶ್‌ ಪಿ @ ಉಮೇಶ್‌ ರೆಡ್ಡಿ ಎಂಬಾತನನ್ನು ಬಂಧಿಸಿದ್ದಾರೆ.

ತನಿಖೆ ಸಮಯ ಅಪಾದಿತನು ತಾನು ಕಳವು ಮಾಡಿದ  ಚಿನ್ನಾಭರಣಗಳನ್ನು  ತಮಿಳು ನಾಡು ಮದುರೈ ಕಡೆ ಮಾರಾಟ ಮಾಡುವುದಕ್ಕಾಗಿ ಗಟ್ಟಿ ಮಾಡಿಸಿ  ಬಚ್ಚಿಟ್ಟಿರುವುದಾಗಿ  ತಿಳಿಸಿದ  ಮೇರೆಗೆ  ತನಿಖಾಧಿಕಾರಿ   ಶಿವಕುಮಾರ್‌  ಬಿ.  ವೃತ್ತ ನಿರೀಕ್ಷಕರು, ಬೈಂದೂರು  ರವರು ತನಿಖಾ  ತಂಡದೊಂದಿಗೆ  ತಮಿಳುನಾಡು ಮಧುರೈಗೆ  ಹೋಗಿ ಆರೋಪಿಯಿಂದ ಸುಮಾರು 2.81 ಲಕ್ಷ  ಮೌಲ್ಯದ  ಒಟ್ಟು 22 ಗ್ರಾಂ ಚಿನ್ನದ ಗಟ್ಟಿಯನ್ನು  ಸ್ವಾದೀನಪಡಿಸಿಕೊಂಡಿರುತ್ತಾರೆ. 

ಅಪಾದಿತ ಉಮೇಶ್‌ ಬಳೆಗಾರ ಅಂತರ್‌ರಾಜ್ಯ ರೂಡಿಗತ ಕಳವು ಪ್ರಕರಣಗಳ  ಆರೋಪಿಯಾಗಿದ್ದು  ಈತನ ವಿರುದ್ದ ತಮಿಳುನಾಡು, ಕೇರಳ  ಹಾಗೂ ಕರ್ನಾಟಕ  ರಾಜ್ಯದ  ವಿವಿಧ  ಜಿಲ್ಲೆಯಲ್ಲಿ ಪೊಲೀಸ್‌ ಠಾಣೆಗಳಲ್ಲಿ ಒಟ್ಟು  36  ಪ್ರಕರಣಗಳು  ದಾಖಲಾಗಿದ್ದು, 8  ಪ್ರಕರಣಗಳಲ್ಲಿ   ಶಿಕ್ಷೆಯಾಗಿರುತ್ತದೆ. ಇನ್ನೂ  23 ಪ್ರಕರಣಗಳು ಕೇರಳ  ತಮಿಳುನಾಡು ಮತ್ತು  ಕರ್ನಾಟಕದ, ಬೆಳ್ತಂಗಡಿ,  ಬಂಟ್ವಾಳ, ಮೂಡಬಿದ್ರಿ , ಸುಬ್ರಹ್ಮಣ್ಯ , ಪುತ್ತೂರು,  ಕೊಪ್ಪ, ತೀರ್ಥಹಳ್ಳಿ, ಶಿರಸಿ,   ಬಸವನಹಳ್ಳಿ  ಚಿಕ್ಕಮಗಳೂರು. ಹಿರಿಯೂರು ಚಿತ್ರದುರ್ಗ, ಶೃಂಗೇರಿ, ಕುಮಟಾ, ಮಲ್ವೆ, ಮತ್ತು ಕಾಪು  ಪೊಲೀಸ್‌  ಠಾಣೆಗಳ  ವ್ಯಾಪ್ತಿಯ   ನ್ಯಾಯಾಲಯಗಳಲ್ಲಿ  ವಿಚಾರಣೆಯಲ್ಲಿ ಬಾಕಿ ಇರುತ್ತದೆ.  

ಈ ಕಾರ್ಯಾಚರಣೆಯನ್ನು ಹೆಚ್.ಡಿ. ಕುಲಕರ್ಣಿ  ಪೊಲೀಸ್‌ ಉಪಾಧೀಕ್ಷಕರು ಕುಂದಾಪುರ ಉಪವಿಭಾಗರವರ  ಮಾರ್ಗದರ್ಶನದಲ್ಲಿ  ಶಿವಕುಮಾರ್‌  ಬಿ., ಸಿಪಿಐ  ಬೈಂದೂರು   ನೇತೃತ್ವದಲ್ಲಿ ನಡೆಸಿದ್ದು, ಕಾರ್ಯಾಚರಣೆಯಲ್ಲಿ  ಬೈಂದೂರು ಪೊಲೀಸ್‌ ಠಾಣೆಯ ಪಿ.ಎಸ್‌.ಐ ರವರಾದ ಸುನೀಲ್‌ ಕುಮಾರ್.‌ ಬಿ.ವೈ ಮತ್ತು  ನವೀನ  ಬೋರ್ಕರ್,  ಕೊಲ್ಲೂರು ಪೊಲೀಸ್‌ ಠಾಣೆಯ ಪಿ.ಎಸ್.ಐ.  ಭೀಮಾಶಂಕರ  ಮತ್ತು ವಿನಯ ಕೊರ್ಲಹಳ್ಳಿ ಹಾಗೂ ಬೈಂದೂರು ಪೊಲೀಸ್‌  ಠಾಣೆಯ ಎಎಸ್‌ಐ ಸೀತಾರಾಮ  ಮತ್ತು ಸಿಬ್ಬಂದಿಯವರಾದ ಚಿದಾನಂದ, ಮಾಳಪ್ಪ ದೇಸಾಯಿ, ತಿಮ್ಮಣ್ಣ ನಾಯ್ಕ, ಕೊಲ್ಲೂರು ಠಾಣೆಯ ಸಿಬ್ಬಂದಿಯವರಾದ ನಾಗೇಂದ್ರ, ರಾಮ ಪೂಜಾರಿ , ಗಂಗೊಳ್ಳಿ ಠಾಣೆಯ   ಸಿಬ್ಬಂದಿಯವರಾದ  ಕೃಷ್ಣ ,  ಸಂದೀಪ್‌ ಕುರಾಣಿ , ಹಾಗೂ ಜಿಲ್ಲಾ ಪೊಲೀಸ್‌  ಕಛೇರಿಯ  ಬೆರಳು ಮುದ್ರೆ  ವಿಭಾಗದ  ಪೊಲೀಸ್‌  ನಿರೀಕ್ಷಕರಾದ  ಎಲ್‌  ಮೋಹನ ಕುಮಾರಿ ಮತ್ತು  ಸಿಬ್ಬಂದಿಯವರು  ಮತ್ತು ಉಡುಪಿ ಜಿಲ್ಲಾ ಪೊಲೀಸ್‌ ಕಛೇರಿಯ ದಿನೇಶ್‌  ಸಹಕರಿಸಿರುತ್ತಾರೆ.