ದೀವಿಗೆ ಅಮವಾಸ್ಯೆ ಅಥವಾ ಕರ್ಕಾಟಕ ಅಮವಾಸ್ಯೆ ಎಂದು ಕರೆಯಲ್ಪಡುವ ಈ ದಿನ ಶಿವ ಮತ್ತು ವಿಷ್ಣು(ನರಸಿಂಹ) ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಸಂಭ್ರಮವಿರುತ್ತದೆ. ಅಂತೆಯೇ ತಾಲೂಕಿನಾದ್ಯಂತ ಹರಿ-ಹರ ರ ಸನ್ನಿದಿಯಲ್ಲಿ ಬೆಳಗ್ಗಿನಿಂದಲೇ ಪೂಜಾ ಕೈಂಕರ್ಯಗಳು ನಡೆದವು.ತಾಲೂಕಿನಲ್ಲಿ ಕೋಟೇಶ್ವರ, ಕುಂಭಾಸಿ, ಕುಂದೇಶ್ವರ, ಶಂಕರನಾರಾಯಣ, ಸೋಮೇಶ್ವರ ಸೇರಿದಂತೆ ಹಲವು ಶಿವ ದೇವಸ್ಥಾನಗಳು ಹಾಗೂ ಮರವಂತೆಯ ವರಹಾಸ್ವಾಮಿ ವಿಷ್ಣು ದೇವಾಲಯ ಪ್ರಮುಖವಾದವುಗಳು.
* ಸಾವಿರಾರು ಭಕ್ತರಿಂದ ಸಮುದ್ರ ಸ್ನಾನ, ದೇವರ ದರ್ಶನ ಮತ್ತು ವಿಶೇಷ ಪೂಜೆ.
* ನವ ದಂಪತಿಗಳಿಂದ ಸಮುದ್ರ ಸ್ನಾನ ವಿಶೇಷ ನಂಬಿಕೆ
ಪ್ರತಿ ವರ್ಷ ಕರ್ಕಾಟಕ ಅಮವಾಸ್ಯೆಯ ದಿನ ಜರುಗುವ ಈ ಜಾತ್ರೆಗೆ ವಿವಿಧ ಪ್ರದೇಶಗಳಿಂದ ಆಗಮಿಸುವ ಭಕ್ತಾದಿಗಳು ಸಮುದ್ರ ಸ್ನಾನ ಮಾಡಿ ಶ್ರೀ ದೇವರ ದರ್ಶನ ಪಡೆದರು ಅಲ್ಲದೆ ಸಾವಿರಾರು ಜೋಡಿ ನವ ದಂಪತಿಗಳು ಮಹಾರಾಜಸ್ವಾಮಿ ಶ್ರೀ ವರಾಹ ದೇವಸ್ಥಾನಕ್ಕೆ ಬಂದು ಸೇವೆ ಮಾಡಿಸಿ ಪ್ರಸಾದ ಸ್ವೀಕರಿಸಿದರು.ಅಲ್ಲದೇ ದೇವಾಲಯದ ಸಮೀಪದ ಸ್ವಪಣರ್ಿಕ ನದಿಯಲ್ಲಿ ಸ್ನಾನ ಮಾಡಿದ ಭಕ್ತರು ಮಹಾರಾಜಸ್ವಾಮಿ ಶ್ರೀ ವರಾಹ ದೇವರಿಗೆ ಪೂಜೆ ಸಲ್ಲಿಸಿದರು. ಜಾತ್ರೋತ್ಸವ ಪ್ರಯುಕ್ತ ಪೂಜೆ ಪುನಸ್ಕಾರಗಳು ನಡೆದು ಪ್ರಸಾದ, ನೈವೇದ್ಯಗಳನ್ನು ಭಕ್ತರಿಗೆ ವಿತರಿಸಲಾಯಿತು. ಈ ಕಾರ್ಯಕ್ಕೆ ಪೂರ್ವಭಾವಿಯಾಗಿ ಸಿದ್ದತಾ ಕಾರ್ಯ ಒಂದು ವಾರದಿಂದ ನಡೆದಿತ್ತು. ದೂರದೂರುಗಳಿಂದ ಭಕ್ತಾದಿಗಳು ಆಗಮನವಾಗಿದ್ದು, ಎಲ್ಲೆಡೆ ಸಂಭ್ರಮದ ವಾತಾವರಣ ಮನೆಮಾಡಿತ್ತು.
ಜಾತ್ರೆ ಸಲುವಾಗಿ ಜನ ಸಂಚಾರ ಅಧಿಕವಾದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡರೂ ಅಹಿತಕರ ಘಟನೆಗಳಿಲ್ಲದೇ ಜಾತ್ರಾ ಮಹೋತ್ಸವ ಸುಗಮವಾಗಿ ನೆರವೇರಿತು. ಕುಂದಾಪುರ ಡಿವೈಎಸ್ಪಿ ಶೇಖರ ಅಗಡಿ, ಪೊಲೀಸ್ ವೃತ್ತ ನಿರೀಕ್ಷಕ ಮದನ್ ಗಾಂವ್ಕರ್ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪೊಲೀಸ್ ಉಪನಿರೀಕ್ಷಕ ಗೋಪಾಲ ನಾಯ್ಕ್ ನೇತೃತ್ವದಲ್ಲಿ ಪೊಲೀಸರು ಭಾರಿ ಭದ್ರತೆ ಕೈಗೊಂಡಿದ್ದರು. ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.
* ಸಮುದ್ರ ತಟದ ಎಲ್ಲೆಡೆ ಭಕ್ತರ ಕಲರವ.
ಕಹಿ ಕಷಾಯ ಸೇವನೆ : ಕರ್ಕಾಟಕ ಅಮವಾಸ್ಯೆಯ ದಿನ ಹಾಲೆ ಮರದ ತೋಗಟೆಯಿಂದ ಮಾಡಲಾದ ಕಷಾಯವನ್ನು ಕುಡಿಯುವ ಮೂಲಕ ತಮ್ಮ ದೇಹದಲ್ಲಿನ ನಂಜು ಮುಂತಾದ ರೋಗಗಳನ್ನು ವಾಸಿ ಮಾಡಬಹುದು ಎಂಬ ನಂಬಿಕೆ ಹಲವರದ್ದು. ಪುರಾತನ ನಂಬಿಕೆಯಂತೆ ಹಾಲೆ ಮರದ ತೊಗಟೆಯನ್ನು ಕೆತ್ತಲು ಬೆಳಗ್ಗಿನ ಜಾವ ದಿಗಂಬರರಾಗಿ ಹೋಗುತ್ತಿದ್ದರು ಎನ್ನಲಾಗಿದೆ.ಒಟ್ಟಾರೆ ತಾಲೂಕಿನಾದ್ಯಂತ ಕಕರ್ಾಟಕ ಅಮವಾಸ್ಯೆಯನ್ನು ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.
ಚಿತ್ರವರದಿ: ಯೋಗೀಶ್ ಕುಂಭಾಸಿ